ದಿನಕ್ಕೊಂದು ಕಥೆ. 229

🌻🌻 *ದಿನಕ್ಕೊಂದು ಕಥೆ*🌻🌻                                         *ಸಿರಿಯ ಅಸಲಿ ಬೆಲೆ ಎಷ್ಟು?*

ಇಂದಿದ್ದು ನಾಳೆ ಇಲ್ಲದಂತಾಗುವ ಈ ನಶ್ವರ ಪ್ರಪಂಚದ ಮೋಹವನ್ನು ಅಳೆದವರು ಸಂತರು, ಶರಣರು, ಮಹಂತರು. ಅವರಿಗೆ ಈ ಪ್ರಪಂಚದ ಸಿರಿ ಸಂಪದವೆಲ್ಲವೂ ಒಂದು ಹುಲ್ಲುಕಡ್ಡಿಯಂತೆ. ನಮಗಾದರೂ ಈ ಪ್ರಪಂಚವೇ ಸರ್ವಸ್ವ. ಧನಕನಕಾದಿಕಗಳಿಗಾಗಿ ನಾವು ಪ್ರಾಣ ಪಣಕ್ಕಿಟ್ಟು ಹೋರಾಡುತ್ತೇವೆ. ಅಮೂಲ್ಯವಾದ ಆಯುಷ್ಯವನ್ನು ವ್ಯರ್ಥ ಕಳೆಯುತ್ತೇವೆ. ಒಂದು ಗೇಣು ಭೂಮಿಗಾಗಿ ಮಹಾಭಾರತದಂಥ ಘನಘೋರ ಯುದ್ಧವೇ ನಡೆಯಿತು. ಅಣ್ಣ-ತಮ್ಮಂದಿರಾದ ಕೌರವರು, ಪಾಂಡವರು ಬದ್ಧ ವೈರಿಗಳಂತೆ ಹೋರಾಡಿ ಮಡಿದರು. ಒಂದು ಕ್ಷಣ ರೂಪದ ಆಕರ್ಷಣೆ ಒಳಗಾಗಿ ರಾಮಾಯಣ ನಡೆದುಹೋಯಿತು. ಸುಂದರವಾದ ಲಂಕಾ ಪಟ್ಟಣ ಬೂದಿಯಾಯ್ತು. ಮಹಾ ಶಿವಭಕ್ತನಾದ ರಾವಣ ಅಸುನೀಗಿದೆ. ಅಪಾರ ಜೀವಹಾನಿ ಸಂಭವಿಸಿತು. ಇಂಥಾ ನಶ್ವರ ಸಂಪತ್ತಿನ ಮೋಹವು ಸಂತರು, ಶರಣರ ಬಳಿ ಎಂದೂ ಸುಳಿಯಲಿಲ್ಲ.

ಚೀನಾ ದೇಶದ ಸಂತ ಲಾವೋತ್ಸೆ ನಾವೆಯಲ್ಲಿ ಕುಳಿತು ನದಿ ದಾಟುತ್ತಿದ್ದ . ಅದೇ ನಾವೆಯಲ್ಲಿ ಒಬ್ಬ ಸಿರಿವಂತನಿದ್ದ . ಸಂತನನ್ನು ಕಂಡು ವಂದಿಸಿ ಚಿನ್ನದ ಸರವನ್ನು ಕಾಣಿಕೆಯಾಗಿ ಕೊಟ್ಟ. ತಕ್ಷಣ ಸಂತ ಆ ಸರವನ್ನು ನದಿಗೆ ಎಸೆದ. ಸಿರಿವಂತನು ನೀರಿಗಿಳಿದು ಅದನ್ನು ತಂದ. 'ಸಂತರೆ ಇದು ಚಿನ್ನದ ಸರ. ಇದರ ಬೆಲೆ ಎಷ್ಟು ನಿಮಗೆ ಗೊತ್ತೇ?' ಎಂದು ಕೇಳಿದ. ಸಂತ ಲಾವೋತ್ಸೆ ಹೇಳಿದ, ''ಅದರ ಬೆಲೆ ನಿನ್ನನ್ನು ನೀರಿಗೆ ಜಿಗಿಸುವಷ್ಟು ! ಈ ನದಿಯು ಸಾವಿರಾರು ಬಣ್ಣ ಬಣ್ಣದ ಮೀನುಗಳಿಗೆ, ಮೊಸಳೆಗಳಿಗೆ, ಅಸಂಖ್ಯ ಜಲಚರ ಪ್ರಾಣಿಗಳಿಗೆ ಆಶ್ರಯ ಕೊಟ್ಟಿದೆ. ಈ ಜೀವಂತ ಸಿರಿಯ ಎದುರು ನಿನ್ನ ಈ ನಿರ್ಜೀವ ಚಿನ್ನದ ಸರಕ್ಕೆ ಏನು ಬೆಲೆ ?,'' ಸಂತರ ಈ ನುಡಿಗಳ ಕೇಳಿದಾಗ ಸಿರಿವಂತನ ಕಣ್ಣು ತೆರೆಯಿತು.

ಹಸಿವನ್ನು ಇಂಗಿಸಿಕೊಳ್ಳುವುದಕ್ಕಾಗಿ ಒಂದು ಕೋಳಿಯು ಸಿರಿವಂತರ ತಿಪ್ಪೆಯನ್ನು ಕೆದರುತ್ತಿತ್ತು. ಅಲ್ಲಿ ಆಕಸ್ಮಿಕವಾಗಿ ಅದಕ್ಕೆ ಒಂದು ರತ್ನದ ಹರಳು ದೊರೆಯಿತು. ಅದನ್ನು ನೋಡಿದ ಕೂಡಲೇ ಕೋಳಿಯು ಕಾಲಿನಿಂದ ದೂರ ಎಸೆದು ಹೇಳಿತು- ''ನೀನು ರಾಜಮಹಾರಾಜರನ್ನು ಮರಳು ಮಾಡಿರಬಹುದು. ನಿನಗಾಗಿ ಅವರು ಹೋರಾಡಿ ಪ್ರಾಣವನ್ನೂ ಕಳೆದುಕೊಂಡಿರಬಹುದು. ಆದರೆ ನಾನು ಮಾತ್ರ ನಿನಗೆ ಮರುಳಾಗಲಾರೆ. ಏಕೆಂದರೆ ನಿನ್ನಿಂದ ನನ್ನ ಹಸಿವನ್ನು ನೀಗಿಸಲು ಸಾಧ್ಯವಿಲ್ಲ,'' ಇಷ್ಟು ಹೇಳಿ ಕೋಳಿಯು ಮತ್ತೆ ತಿಪ್ಪೆಯನ್ನು ಕೆದರತೊಡಗಿತು. ಆಗ ಅದಕ್ಕೆ ಒಂದು ಜೋಳದ ಕಾಳು ಸಿಕ್ಕಿತು. ಅದನ್ನು ತೆಗೆದುಕೊಂಡು ಕಣ್ಣಿಗೆ ಒತ್ತಿಕೊಂಡು 'ನೀನು ದೇವರಿಗೂ ದೇವರು ಅನ್ನಬ್ರಹ್ಮ, ನೀನು ಮಾತ್ರ ನನ್ನ ಹಸಿವನ್ನು ನೀಗಿಸಬಲ್ಲೆ ' ಎಂದು ಕಾಳನ್ನು ಸೇವಿಸಿ ಕುಣಿಯುತ್ತಾ ಹೊರಟಿತು. ಅಷ್ಟರಲ್ಲೇ ಅಲ್ಲಿಗೆ ಬಂದ ಒಬ್ಬ ಮನುಷ್ಯ ಕೋಳಿ ಎಸೆದಿದ್ದ ರತ್ನದ ಹರಳನ್ನು ಎತ್ತಿಕೊಂಡ. ಇದನ್ನು ನೋಡಿದ ಸಿರಿವಂತರ ಮನೆಯುವರು ಬಂದು ಆತನನ್ನು ಹಿಡಿದು ಶಿಕ್ಷಿಸಿದರು. ಕೋಳಿಯಷ್ಟು ಬುದ್ಧಿ ಮಾನವರಿಗೆ ಇರುವುದಾದರೆ ರಾಮಾಯಣ, ಮಹಾಭಾರತದಂಥ ಅನಾಹುತ ನಡೆಯುತ್ತಿತ್ತೆ? ಇದಕ್ಕೆಲ್ಲ ಕಾರಣ ಮನುಷ್ಯನಲ್ಲಿರುವ ನಶ್ವರ ಸಿರಿಯ ವ್ಯಾಮೋಹ.
ಆಧಾರ: ಕಥಾಮೃತ.
ಕೃಪೆ:ಶ್ರೀ ಸಿದ್ದೇಶ್ವರ ಸ್ವಾಮೀಜಿ.                        ಸಂಗ್ರಹ ವೀರೇಶ್ ಅರಸಿಕೆರೆ .ದಾವಣಗೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059