ದಿನಕ್ಕೊಂದು ಕಥೆ. 402

*🌻ದಿನಕ್ಕೊಂದು ಕಥೆ 402🌻                                                                ಅಶಾಂತಿ ಇದ್ದರೆ ಅರಮನೆಯೂ ಸೆರೆಮನೆ.*

ಜೀವನವನ್ನು ಅಮೂಲ್ಯವಾಗಿಸುವ ಸಾಧನವೇ ಧ್ಯಾನ. ಈ ಧ್ಯಾನವನ್ನು ಎಲ್ಲಿ, ಯಾವಾಗ, ಹೇಗೆ, ಏಕೆ ಮಾಡಬೇಕು ಎನ್ನವುದನ್ನು ಋಷಿ ಮುನಿಗಳು ತಮ್ಮ ಉಪನಿಷತ್ತಿನಲ್ಲಿ ಸವಿಸ್ತಾರವಾಗಿ ಹೇಳಿದ್ದಾರೆ.

ಇದು ಔಪನಿಷಧಿಕ ಧ್ಯಾನವೆಂದೇ ಪ್ರಚಲಿತವಾಗಿದೆ. ಧ್ಯಾನದಿಂದ ನಮ್ಮ ಮನಸ್ಸು ಶಾಂತವಾಗುತ್ತದೆ. ಸ್ವಚ್ಛತೆ ಮತ್ತು ಶಾಂತಿಯೇ ಬದುಕಿನ ಗುರಿ ಅದರಿಂದ ನಮ್ಮ ಬದುಕು ಸಮೃದ್ಧವೂ, ಸಂತೃಪ್ತವೂ ಆಗುತ್ತದೆ. ಒಂದು ಮನೆಯಲ್ಲಿ ಸ್ವಚ್ಛತೆ ಮತ್ತು ಶಾಂತಿ ನೆಲೆಸಿದ್ದರೆ ಅದರ ಸೌಂದರ್ಯವು ಹೆಚ್ಚುತ್ತದೆ. ಹಗಲು ರಾತ್ರಿ ಮನೆಯವರು ಜಗಳವಾಡುತ್ತಿದ್ದರೆ, ಮನೆಯ ಮೂಲೆ ಮೂಲೆಯಲ್ಲಿ ಕಸ ತುಂಬಿಕೊಂಡಿದ್ದರೆ, ಅದು ಅರಮನೆಯಾಗಿದ್ದರೂ ಸೆರೆಮನೆಯೇ ಸರಿ. ಭವ್ಯವಾದ ಕಟ್ಟಡದಿಂದ ಮನೆಯ ಸೌಂದರ್ಯ ವರ್ಧಿಸುವದಿಲ್ಲ. ಸ್ವಚ್ಛತೆ ಮತ್ತು ಶಾಂತಿಯಿಂದ ಮನೆಯ ಸೌಂದರ್ಯ ಅಭಿವರ್ಧಿಸುತ್ತದೆ.

ಸುಕರಾತನು ಶ್ರೇಷ್ಠ ತತ್ತ್ವಜ್ಞಾನಿ, ಸಂತ. ಕಲ್ಲು ಮತ್ತು ಕಟ್ಟಿಗೆಯಲ್ಲಿ ಕೆತ್ತನೆಯ ಕೆಲಸ ಮಾಡಿಕೊಂಡಿದ್ದ. ಒರಟು ಒರಟಾದ ದೇಹ. ಅವನು ಅಷ್ಟೇನು ಸುಂದರನಲ್ಲ. ಆದರೆ ಆತನ ಹೃದಯದಲ್ಲಿದ್ದ ಭಾವನಗೆಳ ತಲೆಯೊಳಗಿದ್ದ ವಿಚಾರಗಳ ಸೌಂದರ್ಯ ಅಪ್ರತಿಮ. ಸಾವಿರಾರು ಜನ ಸಿರಿವಂತ ಯುವಕರು ಅವನ ಶಿಷ್ಯರು. ಸುಕರಾತನ ಹೆಂಡತಿ ಝಾಂತಿಪೆಗೆ ಮಾತ್ರ ಜಗಳವೆಂದರೆ ಪಂಚಪ್ರಾಣ. ಗಂಡನು ಯಾವಾಗಲೂ ಶಿಷ್ಯರಿಗೆ ಉಪದೇಶ ಮಾಡುವುದರಲ್ಲಿಯೇ ಮಗ್ನನಾಗಿರುತ್ತಿದ್ದ. ಪ್ರಪಂಚದತ್ತ ಅಷ್ಟಾಗಿ ಲಕ್ಷ್ಯವಿರಲಿಲ್ಲ. ಹೆಂಡತಿಯು ಮನೆಯ ವ್ಯವಹಾರವನ್ನೆಲ್ಲನೋಡಿಕೊಳ್ಳುತ್ತಿದ್ದಳು. ಒಂದು ದಿವಸ ಮನೆಯಲ್ಲಿ ಒಂದು ಕಾಳೂ ಧಾನ್ಯ ಇರಲಿಲ್ಲ, ಗಂಡನು ಮಾತ್ರ ಶಿಷ್ಯರಿಗೆ ಉಪದೇಶ ಮಾಡುತ್ತಲೇ ಇದ್ದ. ಇದನ್ನು ನೋಡಿದ ಝಾಂತಿಪಿಗೆ ಸಿಟ್ಟು ತಡೆಯಲಾಗಲಿಲ್ಲ. ಮುಸುರೆಯ ಗಡಿಗೆ ತೆಗೆದುಕೊಂಡು ಹೋಗಿ ಶಿಷ್ಯರ ಎದುರೇ ಗಂಡನ ತಲೆಯ ಮೇಲೆ ಸುರಿದಳು. ಶಿಷ್ಯರೆಲ್ಲ ಗಾಬರಿಗೊಂಡರು. ಸುಕರಾತನು ಮಾತ್ರ ಏನೂ ನಡೆದೇ ಇಲ್ಲ ಎನ್ನುವಂತೆ ಶಾಂತವಾಗಿ ಉಪದೇಶ ಮಾಡುತ್ತಲೇ ಇದ್ದ! ಒಂದು ದಿನ ಒಬ್ಬ ಗೆಳತಿ ಝಾಂತಿಪಿಗೆ ಕೇಳಿದಳು-‘ಇಂಥ ಸೋಮಾರಿ ಗಂಡನನ್ನು ತೆಗೆದುಕೊಂಡು ಏನು ಮಾಡುತ್ತಿ, ಬೇರೆ ಗಂಡನನ್ನು ಮಾಡಿಕೋ!’ ಝಾಂತಿಫಿ ಹೇಳಿದಳು- ‘ಈ ಮನೆಯಲ್ಲಿ ಮಾತನಾಡುವವಳು ನಾನೊಬ್ಬಳೆ. ದಿನವಿಡೀ ನಾನು ಬಯ್ಯುತ್ತಿದ್ದರೂ ನನ್ನ ಗಂಡ ಒಂದೇ ಒಂದು ಶಬ್ದ ತಿರುಗಿ ಮಾತನಾಡುವುದಿಲ್ಲ. ಇಂಥ ಶಾಂತಮೂರ್ತಿ, ಶ್ರೇಷ್ಠ ತತ್ತ್ವಜ್ಞಾನಿ ಸಂತಶಿರೋಮಣಿ ನನಗೆಲ್ಲಿ ಸಿಗುತ್ತಾನೆ. ಪ್ರಪಂಚದ ತಾಪ ತಾಳಲಾಗದೆ ನಾನು ಸುಮ್ಮನೆ ಬೈಯ್ಯುತ್ತಿರುತ್ತೇನೆ ಅಷ್ಟೇ!’ ಇಂಥ ಶಾಂತಿಯು ಮನೆ ಮನೆಯಲ್ಲಿ ಮನ-ಮನದಲ್ಲಿ ನೆಲೆಸಿದ್ದರೆ ಅದುವೆ ಸಾರ್ಥಕ, ಸಮೃದ್ಧ, ಸುಂದರ ಬದುಕು. ಧ್ಯಾನಯೋಗವೆ ಶಾಂತಿಯ ಸುಗಮ ಸಾಧನ. ದೇವನ ಸುಂದರ ರೂಪ, ಲಕ್ಷಣಗಳನ್ನು ಆಧರಿಸಿ ಮಾಡುವುದೆ ವೈಚಾರಿಕ ಧ್ಯಾನವಾಗಿದೆ.

ಪರಮೇಶ್ವರನು ಪ್ರಭುವು, ತ್ರಿಲೋಚನನು, ನೀಲಕಂಠನು, ಪ್ರಶಾಂತನು, ಶಕ್ತಿಸಮೇತನೂ ಆಗಿರುತ್ತಾನೆ. ಇಂಥ ಪರಮಾತ್ಮನ ಧ್ಯಾನಮಾಡಿದ ಮುನಿಯು ಜಗತ್‌ಸಾಕ್ಷಿಯು, ಚರಾಚರ ಜನಕನೂ ಆಗಿರುವ ಜಗದೀಶನಲ್ಲಿ ಬೆರೆತು ಒಂದಾಗಿ ಸಮರಸಾನಂದವನ್ನು ಪಡೆಯುತ್ತಾನೆ.

ಉಮಾ ಎಂದರೆ ಪಾರ್ವತಿ ಅಥವಾ ಶಕ್ತಿ. ಶಿವನು ಶಕ್ತಿಸಹಿತನಾಗಿದ್ದಾನೆ. ಶಕ್ತಿ ಇಲ್ಲದೆ ಯಾವುದೇ ಕಾರ್ಯ ನಡೆಯುವುದಿಲ್ಲ. ನಡೆಯಲು, ನುಡಿಯಲು ಹೇಳಲು ಕೇಳಲು, ನೋಡಲು ಮಾಡಲು ಎಲ್ಲದಕ್ಕೂ ನಮ್ಮ ದೇಹದಲ್ಲಿ ಶಕ್ತಿ ಇರಬೇಕಾಗುತ್ತದೆ. ಅರ್ಧಾಂಗ-ವಾಯು ಕಾಯಿಲೆಯಿಂದ ಬಳಲುವ ಮನುಷ್ಯನು ಯಾವುದೇ ದೈಹಿಕ ಕಾರ್ಯಗಳನ್ನು ಸರಿಯಾಗಿ ಮಾಡಲಾರನು. ಏಕೆಂದರೆ ಅವನ ದೈಹಿಕ ಶಕ್ತಿಯು ಕುಂದಿರುತ್ತದೆ, ಮಳೆ ಆಗುವುದಕ್ಕೆ, ಬೆಳೆ ಬರುವುದಕ್ಕೆ, ಗಾಳಿ ಬೀಸುವುದಕ್ಕೆ, ಸೂರ್ಯೋದಯ, ಚಂದ್ರೋದಯ ಆಗುವುದಕ್ಕೆ ಎಲ್ಲದಕ್ಕೂ ಶಕ್ತಿ ಬೇಕೇ-ಬೇಕು. ಹೀಗೆ ಭೂಮ್ಯಾಕಾಶದಲ್ಲಿ ನಡೆಯುವ ಎಲ್ಲ ಕಾರ್ಯಗಳು ಶಕ್ತಿಯನ್ನೇ ಅವಲಂಬಸಿವೆ.
*ಆಧಾರ: ಕೈವಲ್ಯ ಕುಸುಮ.                           ಕೃಪೆ: ಸಿದ್ದೇಶ್ವರ ಸ್ವಾಮೀಜಿಗಳು.*                                ಸಂಗ್ರಹ :ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059