ದಿನಕ್ಕೊಂದು ಕಥೆ. 656

*🌻ದಿನಕ್ಕೊಂದು ಕಥೆ🌻                         ಮದ್ಯಪಾನ ಪತನಕ್ಕೆ ಕಾರಣ.*

ಈ ಪ್ರಪಂಚದಲ್ಲಿ ಅನೇಕ ದುರಭ್ಯಾಸ, ದುಶ್ಚಟಗಳಿಗೆ ಬಲಿ ಬಿದ್ದು ತಮ್ಮ ಜೀವನದಲ್ಲಿ ಉಜ್ವಲ ಭವಿಷ್ಯತ್ತನ್ನೇ ಹಾಳು ಮಾಡಿಕೊಳ್ಳುವ ಜನರಿದ್ದಾರೆ. ಅಂತಹ ದುಶ್ಚಟಗಳಲ್ಲಿ ಮದ್ಯಪಾನವೂ ಒಂದು. ಇದರ ನಿವಾರಣೆಗಾಗಿ ಶ್ರಮಿಸಿದ ಸಂತರೊಬ್ಬರ ನಿದರ್ಶನವೊಂದು ಹೃದಯಸ್ಪರ್ಶಿಯಾಗಿದೆ.

ಒಮ್ಮೆ ಸಂತರೊಬ್ಬರು ನೌಕೆಯನ್ನೇರಿ ಗಂಗಾ ನದಿಯನ್ನು ದಾಟುತ್ತಿದ್ದರು. ಆದರೆ ಆ ನೌಕೆಯ ಅಂಬಿಗನು ಕುಡುಕನೆಂದು ತಿಳಿದ ಸಂತರಿಗೆ ಗಾಬರಿಯಾಯಿತು. ಏಕೆಂದರೆ ಆತ ಚೆನ್ನಾಗಿ ದೋಣಿಸಲು ಅಸಮರ್ಥನಾಗಿದ್ದನು. ಸಂತರು ಆ ಅಂಬಿಗನೊಡನೆ ಹೇಳಿದರು- 'ಲೋ ತಮ್ಮ ಕುಡಿದ ಅಮಲಿನಲ್ಲಿ ನೌಕೆ ನಡೆಸಬಾರದು. ಅಮಲಿನಿಂದಾಗಿ ಶರೀರ, ಬುದ್ಧಿಗಳೆರಡೂ ಕೆಡುತ್ತವೆ. ನೀನು ನೌಕೆಯನ್ನು ಮುಳುಗಿಸಿ ಬಿಡುವ ಅಪಾಯವಿದೆ'.

ಈ ಮಾತು ಕೇಳಿದ ಅಂಬಿಗ ಸಿಟ್ಟುಗೊಂಡು, ಸಂತರ ಕೈಯನ್ನು ಒತ್ತಿ ಹಿಡಿದು ನುಡಿದ- 'ಬಾಬಾಜೀ, ನಿಮ್ಮ ಉಪದೇಶ ನನಗೆ ಬೇಕಿಲ್ಲ. ಹೆಚ್ಚು ಮಾತಾಡಿದರೆ ನಿಮ್ಮನ್ನೇ ಎತ್ತಿ ನದಿಗೆ ಎಸೆದು ಬಿಡ್ತೇನೆ'.

ಆಗ ಆಕಾಶದಿಂದ ಒಂದು ಆಕಾಶವಾಣಿ ಕೇಳಿಸಿತು- 'ಇಲ್ಲಿ ಸಂತರನ್ನು ಅಪಮಾನಿಸಿದ ಅಂಬಿಗನ ದೋಣಿ ಮುಳುಗಲಿದೆ'. ಆಗ ಬೀಸಿದ ಬಿರುಗಾಳಿಗೆ ದೋಣಿ ಅಲ್ಲಾಡತೊಡಗಿತು. ತಕ್ಷ ಣವೇ ಸಂತರು ಭಗವಂತನನ್ನು ಪ್ರಾರ್ಥಿಸಿದರು- 'ಹೇ ಭಗವಾನ್‌, ಈ ಬಡಪಾಯಿ ಮುಗ್ಧನಿದ್ದಾನೆ. ಕುಡಿದ ಅಮಲಿನಲ್ಲಿ ಅವಿವೇಕಿಯಾಗಿದ್ದಾನೆ. ಈ ನೌಕೆಯಿಂದಲೇ ಅವನ ಜೀವನ ನಿರ್ವಹಣೆಯಾಗಬೇಕು. ಈ ನೌಕೆ ಮುಳುಗಿದರೆ ಆತನ ಹೆಂಡತಿ, ಮಕ್ಕಳು ಹಸಿವಿನಿಂದ ಸಾಯಲಿದ್ದಾರೆ. ದಯವಿಟ್ಟು ಕ್ಷ ಮಿಸಿ'.

ಆಗ ಆಕಾಶವಾಣಿ ನುಡಿಯಿತು- 'ನೀವೇ ಹೇಳಿ, ಹೀಗೆ ಸಂತರಿಗೆ ಅಪಮಾನಿಸಿದ ಈತನಿಗೇನು ಶಿಕ್ಷೆ ಕೊಡಬೇಕು?' ಆಗ ಸಂತರಂದರು- 'ಹೇ ಪ್ರಭು, ನೀವು ಪೂರ್ಣ ಸಮರ್ಥರು. ಇಡೀ ಜಗದ ಕ್ಷೇಮ ಚಿಂತನೆ ನಡೆಸುವವರು. ಇವನ ಹೃದಯಕ್ಕೆ ಜ್ಞಾನದ ಬೆಳಕು ತುಂಬಿ, ಈತನ ಬುದ್ಧಿ ಸರಿ ಮಾಡಿ. ಈತ ಕ್ರೋಧ ಮತ್ತು ಮದ್ಯವನ್ನು ತೊರೆದು ಸಜ್ಜನನಾಗಲಿ'. ನಿಧಾನವಾಗಿ ಬಿರುಗಾಳಿ ಶಾಂತವಾಗಿ ದೋಣಿ ಸರಿಯಾಗಿ ಸಾಗತೊಡಗಿತು. ಅಪಮಾನವಾದರೂ ದಯೆ ತೋರಿ ಕ್ಷ ಮಿಸಿದ ನಂತರ ಕಾಲಿಗಡ್ಡ ಬಿದ್ದು ಕ್ಷ ಮೆ ಕೋರಿದೆ. ಇಷ್ಟರಲ್ಲಿ ದೋಣಿಯು ಗಂಗೆಯ ಆಚೆ ದಂಡೆಯನ್ನು ತಲುಪಿತ್ತು.

ನಾವಿಕನು ಸಂತರನ್ನು ಬೀಳ್ಕೊಟ್ಟು, 'ಇನ್ನೆಂದೂ ಮದ್ಯಪಾನ ಮಾಡಲಾರೆ, ನನ್ನನ್ನು ಮನ್ನಿಸಿ' ಎಂದಾಗ ಸಂತರು 'ತಥಾಸ್ತು' ಎಂದು ಆಶೀರ್ವದಿಸಿದರು.

ಇಲ್ಲಿ ಇಡೀ ಲೋಕದ ಮದ್ಯಪಾನಿಗಳ ಕಣ್ತೆರೆಯಿಸುವ ಸಂದೇಶವಿದೆ. ಮದ್ಯಪಾನ ಮಾಡಿದವರು ತಮ್ಮ ಮನೆಯವರನ್ನೇ ಮರೆತು ಪತನದ ಹಾದಿ ಹಿಡಿಯುತ್ತಾರೆ. ಆದರೆ ಸಂತರು ಅಂಥವರಿಗೂ ಹಿತವನ್ನೆ ಹಾರೈಸುತ್ತಾರೆಂಬುದು ಶ್ಲಾಘನೀಯ.

ಕೃಪೆ :ವಿರೇಂದ್ರ ಹೆಗ್ಗಡೆಯವರು                 ಸಂಗ್ರಹ :ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059