ದಿನಕ್ಕೊಂದು ಕಥೆ 878

*🌻ದಿನಕ್ಕೊಂದು ಕಥೆ🌻                                                  ತಾನೊಬ್ಬನೇ ತಿನ್ನಬೇಕೆನ್ನುವುದು ನರಕವಾದರೆ, ಸ್ವರ್ಗ ಯಾವುದು?*

ಸ್ವರ್ಗ ನರಕಗಳ ಕತೆಗಳನ್ನು ಹೇಳುವವರನ್ನು ನೀವು ಅವುಗಳನ್ನು ನೋಡಿದ್ದೀರಾ ಎಂದು ಕೇಳಿ ನೋಡಿ. ಬೇರೆಯವರು ತಲೆ ಆಡಿಸುವಂತೆ ಕತೆ ಹೇಳುವ ಅವರು ಇಲ್ಲವೆಂದು ತಲೆ ಅಲ್ಲಾಡಿಸುತ್ತಾರೆ. ಕತೆ ಹೇಳುವವರು ಯಾರೂ ಅವುಗಳನ್ನು ಹೋಗಿ ನೋಡಿಲ್ಲ. ಹೋಗಿದ್ದಿದ್ದರೆ ಕತೆ ಹೇಳಲು ಅವರು ಇಲ್ಲಿ ಇರುತ್ತಿರಲಿಲ್ಲ. ನಮಗೂ ಅವರಿಗೂ ಗೊತ್ತಿರುವುದೆಲ್ಲ ಕಲ್ಪನೆಯ ಕತೆಗಳು ಮಾತ್ರ! ಈಗ ಅಂತಹದ್ದೇ ಒಂದು ಅರ್ಥಪೂರ್ಣ ಕಾಲ್ಪನಿಕ ಕತೆ ಇಲ್ಲಿದೆ!

ಒಮ್ಮೆ ವಿದ್ವಜ್ಜನರ ಸಮಿತಿಯಲ್ಲಿ ಸ್ವರ್ಗ–ನರಕಗಳು ಎಂದರೆ ಏನೆಂದು ಚರ್ಚೆ ನಡೆಯಿತು. ಜನ ಎಲ್ಲಿ ನರಳುತ್ತಾರೋ ಅದು ನರಕವೆಂದೂ, ಜನ ಎಲ್ಲಿ ಆನಂದದಿಂದ ಇರುತ್ತಾರೋ ಅದು ಸ್ವರ್ಗವೆಂದೂ ಸಮಿತಿ ಒಮ್ಮತದಿಂದ ಒಪ್ಪಿಕೊಂಡರಂತೆ. ಸ್ವರ್ಗ–ನರಕಗಳನ್ನು ನೋಡಿ ಮಾಡುವ ಅಪರೂಪದ ಅವಕಾಶ ಅವರಿಗೆ ಕಲ್ಪಿಸಿಕೊಡಲಾಯಿತಂತೆ!

ಅವರ ಮೊದಲ ಭೇಟಿ ನರಕಕ್ಕೆ. ಅವರಿಗೆ ಆಶ್ಚರ್ಯ ಉಂಟುಮಾಡಿದ ವಿಷಯವೆಂದರೆ ಅದಕ್ಕೆ ನರಕವೆಂಬ ಹೆಸರಿದ್ದರೂ, ಅದೂ ಶ್ರೀಮಂತ ಪ್ರದೇಶವಾಗಿತ್ತು. ಊಟದ ಮನೆಯಲ್ಲಿ ಯಥೇಚ್ಚ ತಿಂಡಿ–ತಿನಿಸುಗಳಿದ್ದವು. ಆದರೆ ಅಲ್ಲಿದ್ದ ಜನ ಮಾತ್ರ ಹಸಿವೆಯಿಂದ ಸೊರಗಿದ್ದರು. ಯಾರ ಮುಖದ ಮೇಲೂ ಕಳೆಯೇ ಇಲ್ಲ. ಸಿಟ್ಟು ಸೆಡವು ಎದ್ದು ತೋರುತ್ತಿದ್ದವು. ಪರಸ್ಪರ ಜಗಳವಾಡುತ್ತಿದ್ದರು. ಒಬ್ಬರನ್ನೊಬ್ಬರು ಬೈದುಕೊಳ್ಳುತ್ತಿದ್ದರು. ಯಾರೂ ಊಟ ಮಾಡುತ್ತಿರಲಿಲ್ಲ. ಇದು ಹೀಗೇಕೆಂದು ಸಮಿತಿಯವರು ಗಮನಿಸಿದಾಗ, ಗಮನಕ್ಕೆ ಬಂದದ್ದೇನೆಂದರೆ ಅಲ್ಲಿದ್ದ ಜನರಿಗೆಲ್ಲ ಒಂದು ದೈಹಿಕ ದೌರ್ಬಲ್ಯವಿತ್ತು. ಎಲ್ಲರ ತೋಳುಗಳೂ ಭುಜದಿಂದ ಕೈವರೆಗೆ ನೇರವಾಗಿದ್ದವು. ಮೊಣಕೈ ಮಡಿಸಲಾಗುತ್ತಿರಲಿಲ್ಲ. ಹೀಗಾಗಿ ಕೈತುಂಬ ತಿನಿಸು ತೆಗೆದುಕೊಂಡರೂ ಅದನ್ನು ಬಾಯಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಕಷ್ಟಪಟ್ಟು ಬಾಯ ಬಳಿ ಕೈ ಬಂದರೂ ಒಂದೆರಡು ಅಗಳು ಬಾಯಿ ಸೇರುತ್ತಿತ್ತು. ಉಳಿದದ್ದೆಲ್ಲ ನೆಲದ ಮೇಲೆ ಚೆಲ್ಲಿಹೋಗುತ್ತಿತ್ತು. ಹೊಟ್ಟೆ ತುಂಬುವಷ್ಟು ತಿಂಡಿ–ತಿನಿಸು ಇದ್ದರೂ ತಿನ್ನಲಾಗುತ್ತಿರಲಿಲ್ಲ. ಎಲ್ಲರೂ ಹಸಿದುಕೊಂಡೇ ಊಟದ ಮನೆಯಿಂದ ಹೊರಗೆ ಹೋಗುತ್ತಿದ್ದರು. ‘ತಿನ್ನಲು ಬೇಕಾದಷ್ಟಿದ್ದರೂ ಇವರಿಗೆ ತಿನ್ನಲಾಗುತ್ತಿಲ್ಲವಲ್ಲ. ನಿರ್ದಯ ಅನ್ಯಾಯ’ ಎಂದು ಸಮಿತಿಯವರಿಗೆ ಬಹಳ ಬೇಸರವಾಯಿತು.

ಸಮಿತಿಯವರು ಅಲ್ಲಿಂದ ಸ್ವರ್ಗಕ್ಕೆ ಹೋದರು. ನರಕಕ್ಕೂ ಸ್ವರ್ಗಕ್ಕೂ ಅಂತಹ ವ್ಯಾತ್ಯಾಸವೇನೂ ಕಾಣಲಿಲ್ಲ. ಎರಡೂ ಶ್ರೀಮಂತ ಸುಂದರ ಪ್ರದೇಶಗಳೇ! ಆದರೆ ಸಮಿತಿಯವರು ಎಲ್ಲೂ ನಿಲ್ಲದೆ ನೇರ ಊಟದ ಮನೆಗೆ ಹೋದರು. ಅಲ್ಲಿ ಕೂಡಾ ಊಟದ ಮೇಜಿನ ತುಂಬಾ ತಿಂಡಿ ತಿನಿಸುಗಳಿದ್ದವು. ಆದರೆ ಜನ ಅಲ್ಲಿ ಆನಂದವಾಗಿದ್ದರು. ಪರಸ್ಪರ ಸ್ನೇಹದ ಪ್ರೀತಿಯ ಮಾತುಗಳನ್ನಾಡುತ್ತ ಊಟ ಮಾಡುತ್ತಿದ್ದರು. ಇಲ್ಲಿಯೂ ಸಮಿತಿಯವರಿಗೆ ಆಶ್ಚರ್ಯ ಕಾದಿತ್ತು. ಇಲ್ಲಿನ ಮೊಣಕೈ ಬಗ್ಗುತ್ತಿರಲಿಲ್ಲ. ನೇರವಾಗಿ ತಿಂಡಿಯನ್ನು ಬಾಯಲಿಟ್ಟುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಯಾರೂ ಹಸಿವೆಯಿಂದ ಬಳಲುತ್ತಿರಲಿಲ್ಲ. ಎಲ್ಲರೂ ಆನಂದವಾಗಿ ಊಟ ಮಾಡುತ್ತಿದ್ದರು. ತಮ್ಮ ಕೈ ಬಳಸಿ ತಾವೇ ತಿನ್ನಲು ಸಾಧ್ಯವಿಲ್ಲವಾದುದರಿಂದ ಅವರು ತಮ್ಮ ಕೈ ಬಳಸಿ ಮತ್ತೊಬ್ಬರಿಗೆ ತಿನ್ನಿಸುತ್ತಿದ್ದರು. ತಿನ್ನಿಸುವಾಗ ಒಳ್ಳೆಯ ಮಾತಗಳನ್ನಾಡುತ್ತಿದ್ದರು. ಉಪಚಾರ ಮಾಡುತ್ತಿದ್ದರು. ಊಟದ ಮನೆಯಲ್ಲಿ ಆನಂದದ ವಾತಾವರಣವಿತ್ತು!

ಸಮಿತಿಯವರು ಹಿಂತಿರುಗಿ ಬಂದು ಒಂದು ಒಳ್ಳೆಯ ವರದಿ ಸಲ್ಲಿಸಿದರು. ಅದೇನೆಂದರೆ ಸ್ವರ್ಗ–ನರಕಗಳಿಗೆ ಬಹಳ ವ್ಯತ್ಯಾಸವೇನಿಲ್ಲ. ತಾನೊಬ್ಬನೇ ತಿನ್ನಬೇಕು. ಬೇರೆಯವರ ಎನಗೇಕೆ ಎಂದು ಪ್ರಯತ್ನಿಸುವ ಜನರಿದ್ದರೆ ಅದು ನರಕ! ಇತರರಿಗೆ ತಿನಿಸಿ ಸಂತೋಷ ಪಡುವುದಾದರೆ, ಅವರು ನಮಗೂ ತಿನಿಸುತ್ತಾರೆ ಎಂದು ಅರಿತು ಬಾಳುವ ಜನರಿದ್ದರೆ ಅದು ಸ್ವರ್ಗ! ಕತೆ ಕಾಲ್ಪನಿಕವಿರಬಹುದು! ಆದರೆ ಅದರ ಹಿಂದಿನ ತತ್ವ ಮಾತ್ರ ಸತ್ವಪೂರ್ಣ ಅಲ್ಲವೇ ? ನಾವಿರುವಲ್ಲಿಯೇ ಸ್ವರ್ಗ ನರಕಗಳನ್ನು ಸೃಷ್ಠಿಸಿಕೊಳ್ಳುವ ಹಠ ಯೋಗ ನಾವು ಬೆಳೆಸಿಕೊಳ್ಳುವುದು ನಮಗೆ ಸಾಧ್ಯವಲ್ಲವೇ?
ಕೃಪೆ ಷಡಕ್ಷರಿ.ವಿಶ್ವ ವಾಣಿ.
ಸಂಗ್ರಹ :ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059