ದಿನಕ್ಕೊಂದು ಕಥೆ 998

ದಿನಕ್ಕೊಂದು ಕಥೆ
ಕರ್ಣನ ಹಿರಿಮೆ

ಒಂದು ದಿನ‌ ಹಸ್ತಿನಾಪುರದಲ್ಲಿ ಶ್ರೀಕೃಷ್ಣ ಮತ್ತು ಅರ್ಜುನ ಮಾತನಾಡುತ್ತಿದ್ದರು.

ಅರ್ಜುನ: "ಕೃಷ್ಣ, ‌ನಾನು ಬೇಕಾದಷ್ಟು ದಾನ ಮಾಡುತ್ತೇನೆ. ಆದರೂ ಎಲ್ಲರೂ ಕರ್ಣನ ಔದಾರ್ಯದ ಬಗ್ಗೆ ಹೊಗಳುತ್ತಾರೆ."

ಕೃಷ್ಣ: "ಇಲ್ಲ ಅರ್ಜುನ. ದಾನದಲ್ಲಿ ಎಂದಿಗೂ ನೀನು ಕರ್ಣನ ಸಮಕ್ಕೆ ಬರಲಾರೆ. ಅವನು ಆ ಗುಣದಲ್ಲಿ ಎಲ್ಲರನ್ನೂ ಮೀರಿದವನು."

ಅರ್ಜುನನು ಕೃಷ್ಣನು ಕರ್ಣನ ಪಕ್ಷಪಾತಿಯಾಗಿದ್ದಾನೆ ಎಂದು ಮನಸ್ಸಿನಲ್ಲೇ ಅಂದುಕೊಂಡ. ಅರ್ಜುನನ ಮನಸ್ಸನ್ನು ಅರಿತ ಕೃಷ್ಣ "ನಾಳೆ ನಿಮಗಿಬ್ಬರಿಗೂ ಒಂದು ಸ್ಪರ್ಧೆ ಏರ್ಪಡಿಸುತ್ತೇನೆ. ಆಗ ಯಾರು ಹೆಚ್ವಿನ ದಾನಿಗಳು" ಎಂದು ನಿನಗೇ ಅರ್ಥವಾಗುತ್ತದೆ. " ಎಂದ. ಅರ್ಜುನ ಅದಕ್ಕೆ ಒಪ್ಪಿಕೊಂಡ.

ಕೃಷ್ಣನು ಮಾರನೆಯ ದಿನ ಒಂದು ಚಿನ್ನದ ಹಾಗೂ ಒಂದು ಬೆಳ್ಳಿಯ ಬೆಟ್ಟಗಳನ್ನು ಸೃಷ್ಟಿಸಿ ಅರ್ಜುನನಿಗೆ ಸಂಜೆಯೊಳಗೆ ಆ ಎರಡೂ ಬೆಟ್ಟಗಳನ್ನು ದಾನಮಾಡಿ‌ ಮುಗಿಸಲು ಹೇಳಿದ.

ಅರ್ಜುನನು ಆ ಬೆಟ್ಟಗಳನ್ನು ‌ಒಡೆಯುತ್ತಾ ಬಂದವರಿಗೆಲ್ಲಾ ಹಂಚಲಾರಂಭಿಸಿದ. ಸಂಜೆಯವರೆಗೂ ಕೆಲಸವನ್ನು ಮುಂದುವರೆಸಿದರೂ ಅರ್ಧವನ್ನೂ ಕೊಟ್ಟು ಮುಗಿಸಲಾಗಲಿಲ್ಲ. ಕೊನೆಗೆ ದಿನದಂತ್ಯಕ್ಕೆ ಕಾಲು ಭಾಗದಷ್ಟು ಇನ್ನೂ ಉಳಿದಿತ್ತು.

ಕೃಷ್ಣನು ಬಂದು ಅದನ್ನು ನೋಡಿ ಕರ್ಣನಾಗಿದ್ದರೆ ಇದನ್ನು ಯಾವಾಗಲೋ ಕೊಟ್ಟು ಮುಗಿಸುತ್ತಿದ್ದ ಎಂದ. ಅರ್ಜುನನಿಗೆ‌ ಸಿಟ್ಟು ಬಂದರೂ ಕರ್ಣ ಅದನ್ನು ಹೇಗೆ ಮಾಡುತ್ತಾನೆಂದು ಯೋಚಿಸುತ್ತಾ ಸುಮ್ಮನಾದ.

ಕೃಷ್ಣನು ಒಬ್ಬ ಸೈನಿಕನನ್ನು ಕರೆದು ಕರ್ಣನನ್ನು ಕರೆದುಕೊಂಡು ಬರಲು ಅಪ್ಪಣೆ ಕೊಟ್ಟ. ಕೃಷ್ಣ ಹೊಸದಾಗಿ ಮತ್ತೆ ಎರಡು ಬಂಗಾರದ ಮತ್ತು ಬೆಳ್ಳಿಯ ಬೆಟ್ಟಗಳನ್ನು ಸೃಷ್ಟಿಸಿ ಅದನ್ನು ರಾತ್ರಿಯೊಳಗೆ ದಾನ‌ಮಾಡಿ‌ ಮುಗಿಸಲು ಹೇಳಿದ.

ಕರ್ಣನು "ಈಗಲೇ ಮಾಡುತ್ತೇನೆ ಸ್ವಾಮಿ" ಎಂದು ದಾರಿಯಲ್ಲಿ ಹೋಗುತ್ತಿದ್ದ ಇಬ್ಬರನ್ನು ಕರೆದು "ನಿಮ್ಮಿಬ್ಬರಿಗೂ ಒಂದೊಂದು ಬೆಟ್ಟವನ್ನು ಕೊಡುತ್ತಿದ್ದೇನೆ. ಹಣವಂತರಾಗಿ ಸಂತೋಷದಿಂದಿರಿ" ಎಂದ. ಆ ದಾರಿಹೋಕರು ಕರ್ಣನಿಗೆ ಜಯಕಾರ ಹಾಕುತ್ತಾ ಹೊರಟುಹೋದರು.

ಕರ್ಣ ಕೃಷ್ಣನಿಗೆ "ಸ್ವಾಮಿ, ನಿಮ್ಮ ಕೆಲಸವನ್ನು ಮುಗಿಸಿದ್ದೇನೆ" ಎಂದ. ಆಗ ಕೃಷ್ಣ ಅರ್ಜುನನೆಡೆಗೆ ತಿರುಗಿ "ನೋಡಿದೆಯಾ ಅರ್ಜುನ, ಕರ್ಣನಿಗೆ ಬಹಳ ಜನರು ತನ್ನ ಗುಣವನ್ನು ಹೊಗಳಲಿ ಎಂಬ ಆಸೆಯಿಲ್ಲ. ಅವನು ತನ್ನ ಬಳಿ ಇರುವುದನ್ನು ಹಿಂದೆಮುಂದೆ ನೋಡದೆ ಕೊಟ್ಟುಬಿಡಲೂ ಹಿಂಜರಿಯುವುದಿಲ್ಲ" ಎಂದಾಗ ಅರ್ಜುನನು ಕರ್ಣನೇ ತನಗಿಂತ ದಾನದಲ್ಲಿ ಶ್ರೇಷ್ಠ ಎಂದು ಒಪ್ಪಿಕೊಂಡ...
ಕೃಪೆ ವಾಟ್ಸ್ ಆ್ಯಪ್ ಗ್ರೂಪ್
ಸಂಗ್ರಹ ವೀರೇಶ್ ಅರಸಿಕೆರೆ

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059