ದಿನಕ್ಕೊಂದು ಕಥೆ 1080

*🌻ದಿನಕ್ಕೊಂದು ಕಥೆ🌻*
           *ಶರಣಾಗತಿ*

ಪಾಂಡವರು ವನವಾಸದಲ್ಲಿದ್ದಾಗ, ಕೃಷ್ಣ ಒಮ್ಮೆ,ಅವರಿದ್ದೆಡೆಗೆ ಅವರನ್ನು  ವಿಚಾರಿಸಲೆಂದು ಬಂದ. ಎಲ್ಲರಿಗೂ ಅವನನ್ನು  ನೋಡಿ ಬಹಳ ಸಂತೋಷವಾಯಿತು.  ಅವನನ್ನು ‌ನೋಡಿ‌ ದ್ರೌಪದಿಯ ‌ಕಣ್ಣಲ್ಲಿ ನೀರು ಹರಿಯಲಾರಂಭಿಸಿತು.

     ಚಿಂತಿಸಬೇಡ ಸಹೋದರಿ, ಶೀಘ್ರದಲ್ಲೇ ಎಲ್ಲವೂ ಸರಿಹೋಗುತ್ತದೆ ಎಂದು ಹೇಳಿ ಆಕೆಯನ್ನು ಸಮಾಧಾನ ಪಡಿಸಿದ.
    ಇರಲಿ ಬಿಡು ಅಣ್ಣಾ ,ಅದು ಬಂದಾಗ ಬರಲಿ, ನೀನು ಬಂದಿದ್ದೇ ನನಗೆ ಬಹಳ ಸಂತೋಷ, ಈಗ ನೀನು ಸ್ನಾನ ಮಾಡಿ ನಿನ್ನ ಆಯಾಸವನ್ನು ಪರಿಹರಿಸಿಕೋ, ನಂತರ ಭೋಜನ  ಮಾಡುವೆಯಂತೆ,ಎಂದು ಹೇಳಿ, ದ್ರೌಪದಿ  ಕೃಷ್ಣನ ಸ್ನಾನಕ್ಕಾಗಿ ಬಿಸಿ ನೀರನ್ನು ಸಿದ್ಧಪಡಿಸಲು ಹೊರಟಳು.

     ಭೀಮ, ಒಣಗಿದ ಸೌದೆಯನ್ನು ದ್ರೌಪದಿಗೆ ತಂದುಕೊಟ್ಟು, ಒಲೆ ಉರಿಸಲು ಸಹಾಯ  ಮಾಡಿದ.ದ್ರೌಪದಿ ಕೃಷ್ಣನ ಸ್ನಾನಕ್ಕಾಗಿ ಒಲೆ ಉರಿಸತೊಡಗಿದಳು.

    ಆಗ ಎಲ್ಲರೂ ಗುಡಿಸಲ ಹೊರಗೆ ಕುಳಿತು ಮಾತನಾಡುತ್ತಿದ್ದರು. ಆಗ ಕೃಷ್ಣ, ಅರ್ಜುನನನ್ನು ಕುರಿತು, ವನವಾಸದ ಜೀವನ ಹೇಗೇನಿಸುತ್ತಿದೆ ? ಎಂದು ಕೇಳಿದ.
ನೀನು ನಮ್ಮನ್ನೆಲ್ಲಾ ರಕ್ಷಿಸುತ್ತಿರುವಾಗ, ನಮಗೆ ಯಾವುದರ ಚಿಂತೆಯೂ ಇಲ್ಲಾ ಕೃಷ್ಣಾ, ಎಲ್ಲರೂ ಚೆನ್ನಾಗಿಯೇ ಇದ್ದೇವೆ, ಎಂದ ಅರ್ಜುನ.
   ಯುಧಿಷ್ಟಿರಾ, ಇವನ ಮಾತನ್ನು ಕೇಳಿದೆಯಾ, ನಿನ್ನ ತಮ್ಮನಿಗೆ ಇಲ್ಲೇ ಹೆಚ್ಚು ಸಂತೋಷವಂತೆ, ಎಂದು ಹೇಳಿದ ಕೃಷ್ಣಾ.
  ಅವನು ಹೇಳುವುದು ನಿಜ ತಾನೇ? ಪ್ರಕೃತಿಯ ಸೌಂದರ್ಯದ ಜೊತೆಗಿರುವುದಕ್ಕಿಂತ ಬೇರೆ ಇನ್ನೇನು  ಬೇಕು  ಕೃಷ್ಣಾ, ಎಂದ ಯುಧಿಷ್ಠಿರ.

   ನಿನಗೇನಿಸುತ್ತೆ, ತಂಗಿ ದ್ರೌಪದಿ? ಎಂದಾ ಕೃಷ್ಣಾ.
    ನನ್ನ ಗಂಡಂದಿರು ಎಲ್ಲಿರುತ್ತಾರೆ ಅಲ್ಲೇ
 ನನಗೆ ಸಂತೋಷ ಕೃಷ್ಣ, ಅದು ಕಾಡಾದರೇನು? ಅರಮನೆ ಯಾದರೇನು, ಎಂದಳು ದ್ರೌಪದಿ.
    ಒಟ್ಟಲ್ಲಿ ನೀವೆಲ್ಲಾ ಸಂತೋಷವಾಗಿರುವುದೇ ನನಗೆ ಮುಖ್ಯ, ನೀರು ಸಿದ್ಧವಾಯಿತೆ? ,ನಾನು ಸ್ನಾನಕ್ಕೆ ಹೋಗುತ್ತೇನೆ ಎಂದ ಕೃಷ್ಣ. ಇಷ್ಟೊತ್ತಿಗೆ, ಅದು ಕಾದಿರಬೇಕು ನೋಡಿ ಬರುತ್ತೇನೆ ಎಂದಳು ದ್ರೌಪದಿ.

   ಏನಾಶ್ಚರ್ಯ?  ಒಲೆ ಜೋರಾಗಿ ಉರಿಯುತ್ತಿದೆ, ಆದರೆ ನೀರು ಸ್ವಲ್ಪವೂ ಬೆಚ್ಚಗೆ ಆಗಿಲ್ಲ ಎಂದಳು ದ್ರೌಪದಿ. ಭೀಮ ಬಂದು ನೋಡಿದ, ಅರೆ, ಇದೇನು, ಇಷ್ಟು ಜೋರಾಗಿ ಒಲೆ ಉರಿಯುತ್ತಿದೆ, ಆದರೆ ಸ್ವಲ್ಪ  ಬೆಚ್ಚಗೂ
 ಆಗಿಲ್ಲವಲ್ಲ, ನೀರು ಇದ್ದ ಹಾಗೆ ಇದೆಯಲ್ಲಾ, ಎನ್ನುತ್ತಾ  ಕೃಷ್ಣನ ಬಳಿಗೆ ಹೋದ.
ಯಾಕೆ ಏನಾಯ್ತು ,ಎಂದು ಕೃಷ್ಣನೂ ಒಲೆಯ ಹತ್ತಿರ ಬಂದು, ಹಂಡೆಯೊಳಗೆ ಕೈ ಹಾಕಿ ನೋಡಿ, ಹೌದು  ನೀರು ತಣ್ಣಗಿದೆಯಲ್ಲಾ, ಆ ನೀರನ್ನು ಪೂರ್ತಿ ಹೊರಗೆ ಸುರಿಯಿರಿ, ಯಾಕೆ ಬಿಸಿಯಾಗುತ್ತಿಲ್ಲ, ಎಂದು ನೋಡೇ ಬಿಡೋಣ ಎಂದ .

    ಭೀಮ ಹಂಡೆಯಲ್ಲಿದ್ದ ನೀರನ್ನೆಲ್ಲಾ ಹೊರಗೆ ಸುರಿದ, ಆಗ ಅದರೊಳಗೆ ಇದ್ದ ಕಪ್ಪೆ ಹಾರಿ ಹೊರಗೆ ಬಂದಿತು.
‌‌, ಇದು ಹೇಗೆ ಅದರೊಳಗೆ ಹೋಯಿತು ಎಂದು, ಎಲ್ಲರೂ ಆಶ್ಚರ್ಯಗೊಂಡರು.
   ಆಶ್ಚರ್ಯ ಪಡುವುದೇನಿಲ್ಲ, ಹಂಡೆಯೊಳಗೆ ಅದು ಹೋಗಿ ಸೇರಿಕೊಂಡಿತ್ತು, ಅಷ್ಟೇ.ನೀವು ಬೆಂಕಿ ಹಚ್ಚಿದಾಗ, ಕಪ್ಪೆ  ನನಗೆ ಶರಣಾಯಿತು. ಅದನ್ನು ರಕ್ಷಿಸುವುದು ನನ್ನ ಕರ್ತವ್ಯ, ಆದ್ದರಿಂದ ನೀರು ಬಿಸಿಯಾಗಲೇ ಇಲ್ಲ. ನಾನು ಅದನ್ನು ಕಾಪಾಡಿದೆ, ಎಂದ ಕೃಷ್ಣ.

   ಎಲ್ಲರೂ ಭಕ್ತಿಯಿಂದ ಕೃಷ್ಣನಿಗೆ ನಮಸ್ಕರಿಸಿ, ನಾವು ಕೂಡ ನಿನಗೆ ಶರಣಾಗಿದ್ದೇವೆ , ನಮ್ಮನ್ನೂ ರಕ್ಷಿಸು ದೇವಾ, ಎಂದು ಬೇಡಿಕೊಂಡರು.
 ‌‌ ನನ್ನ ಹಾರೈಕೆ ಸದಾ ನಿಮ್ಮ ಮೇಲೆ ಇದ್ದೇ  ಇರುತ್ತದೆ, ಖಂಡಿತ ನಿಮಗೆಲ್ಲರಿಗೂ ಒಳ್ಳೆಯ ಕಾಲ ಬಂದೇ ಬರುತ್ತದೆ, ಎಂದು ಎಲ್ಲರನ್ನೂ  ಹರಿಸಿದ ಕೃಷ್ಣಾ.

  ಅಣ್ಣಾ,  ನನಗೆ ಗೊತ್ತಿಲ್ಲದೇ, ನನ್ನಿಂದ ಎಂಥಾ ಪಾಪಕೃತ್ಯ ನಡೆಯುತ್ತಿತ್ತು, ಅದನ್ನು ನೀನು ತಪ್ಪಿಸಿದೆ, ನೀನು ಎಂಥಾ ಕರುಣಾಮಯಿ, ಎಂಥಾ  ದಯಾಳು,ನಾನು ಕೂಡಾ, ಸದಾ  ಕಾಲ ನಿನ್ನನ್ನು ಸ್ಮರಿಸುವಂತೆ ನನ್ನನ್ನು ಅನುಗ್ರಹಿಸು, ಎಂದು ದ್ರೌಪದಿ  ಕೃಷ್ಣನನ್ನು ಬೇಡಿಕೊಂಡಳು.
  ನೀವೆಲ್ಲರೂ ಚಿರಕಾಲ  ಬಾಳಿ, ಸ್ವಲ್ಪ ದಿನದಲ್ಲಿ   ಎಲ್ಲವೂ ಸರಿಹೋಗುತ್ತದೆ, ಎಂದು ಹರಸಿ ಕೃಷ್ಣ ಅಲ್ಲಿಂದ ಹೊರಟ.

  ‌. ಅದಕ್ಕೇ ದಾಸರು ಹೇಳಿರುವುದು.
ತಲ್ಲಣಿಸದಿರು ಕಂಡ್ಯ , ತಾಳು ಮನವೇ.
ಎಲ್ಲರನು ಸಲಹುವನ್ನು ಇದಕ್ಕೆ ಸಂಶಯ ಬೇಡ.ಎಂದು.
ಪರಮಾತ್ಮನ ದೃಷ್ಟಿಯಲ್ಲಿ ಎಲ್ಲಾ ಜೀವಿಗಳು ಒಂದೇ, ಶರಣಾರ್ಥಿಯಾಗಿ  ಬಂದವರನ್ನು ಅವರು ಎಲ್ಲೇ ಇರಲಿ, ಹೇಗೇ ಇರಲಿ,ಅಲ್ಲೇ ಬಂದು ರಕ್ಷಣೆ ಮಾಡೇ ಮಾಡುತ್ತಾನೆ,ಆ ಭಗವಂತ.

ಕೃಪೆ : ಸುವರ್ಣಾ ಮೂರ್ತಿ.
ಸಂಗ್ರಹ:ವೀರೇಶ್ ಅರಸೀಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059