ದಿನಕ್ಕೊಂದು ಕಥೆ. 367

🌻 *ದಿನಕ್ಕೊಂದು ಕಥೆ🌻*

ನಾವಿಂದು ವಸ್ತುವಿಗೆ ಬೆಲೆ ಕೊಟ್ಟಿದ್ದೇವೆ, ಆದರೆ ಬದುಕಿಗೆ ಬೆಲೆ ಕೊಟ್ಟಿಲ್ಲ. ವಸ್ತುವೇ ಬದುಕು ಅಂದುಕೊಂಡಿದ್ದೇವೆ.

ಒಬ್ಬ ಯುವಕ ಹೊಸ ಬೂಟು ತಂದಾನೆ, ಏನು ಚಂದ ಇವೆ. ಬೆಲೆ ಲಕ್ಷ ರೂಪಾಯಿ, ಮಾವ ಮದುವೆಗೆ ಕೊಡಿಸಿದ್ದು. Made in Italy. ಆದರೆ ಅವು ಕಾಲಿಗೆ ತೊಡಾವು, ಕಾಲಿಗೆ ಬೂಟು ಸರಿಯಾಗಿ ಹೊಂದಾಕೆ ಒಲ್ಲವು. ಆದರೆ ಇವನೇ ಬೂಟಿಗೆ ಕಾಲು ಹೊಂದಿಸ್ಯಾನ, ಬೂಟು ಕಾಲಿಗೆ ಚುಚ್ಚುತಾವೆ, ನಡೆಯೋಕೆ ತ್ರಾಸ್ ಆಗ್ಯಾವ, ಆದ್ರೂ ಇವನು ಬೂಟು ಕಳಚಂಗಿಲ್ಲ. ಏಕೆಂದರೆ ಅವುಗಳ ಬೆಲೆ ಲಕ್ಷ! Made in Italy.

ಕಾಲು ಹೇಳ್ತದೆ: "ತಗೆ ಬೂಟನ್ನ ನಾನು ಮುಖ್ಯಾನೋs, ಬೂಟು ಮುಖ್ಯಾನೋs. ಕಾಲು ಇರೋದಿಕ್ಕೆ ಬೂಟು ಇದ್ದಾವೆ, ಬೂಟು ಇರೋದಿಕ್ಕೆ ಕಾಲಿಲ್ಲ ಇದನ್ನು ತಿಳಕೋ"
ಬೂಟು ಹೋದಾವು ಮತ್ತೆ ಬಂದಾವು. ಆದರೆ ಕಾಲೇ ಹೋದರೆ?
ಕಾಲಿಗೆ ಇರೋ ಬುದ್ಧಿ ತೆಲೆಗೆ ಇಲ್ಲ. ಯಾವುದು ಮುಖ್ಯ ಅಂತ ತಿಳಿದಿಲ್ಲ.

ಜೀವನದಲ್ಲಿ ವಸ್ತುಗಳೇ ಮುಖ್ಯ ಅಂದುಕೊಂಡಿದ್ದೇವೆ. ವಸ್ತುಗಳೇ ಜೀವನ ಅಂದುಕೊಂಡಿದ್ದೇವೆ.

ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು              ಸಂಗ್ರಹ: ವೀರೇಶ್ ಅರಸಿಕೆರೆ.                                                                        ***********************************ನಿನ್ನೆ ಮೊನ್ನೆಯಷ್ಟೇ ನಡೆಯಲು ಕಲಿಯುತ್ತಿದ್ದ ಮಕ್ಕಳು ಅದ್ಹೇಗೆ ಬೆಳೆದು ದೊಡ್ಡವರಾದರೆಂದೇ ಗೊತ್ತಾಗುವುದಿಲ್ಲ. ಅಯ್ಯೋ ನನ್ನ ಮಗ ಇನ್ನೂ ಸಣ್ಣವನು ಎನಿಸುತ್ತಿದ್ದರೂ ಅವನಾಗಲೇ ನಿಮಗೆ ಎದುರು ಮಾತನಾಡಲು ಶುರು ಮಾಡಿರುತ್ತಾನೆ. ಸಣ್ಣ ಪುಟ್ಟ ವಿಷಯಕ್ಕೂ ಅಪ್ಪ ಅಮ್ಮನ ಬೆನ್ನು ಬೀಳುತ್ತಿದ್ದ ಮಗಳು ಈಗ ಬೆನ್ನು ತಿರುಗಿಸಿ ಹೋಗುತ್ತಾಳೆ. ನಮ್ಮ ಮಕ್ಕಳು ನಾವು ಹೇಳಿದ್ದನ್ನು ಕೇಳುವುದೇ ಇಲ್ಲ ಎಂಬುದು ಬಹುಶಃ ಪ್ರತಿಯೊಬ್ಬ ಪೋಷಕನ ದೂರು. ಚಿಕ್ಕಂದಿನಲ್ಲಿಯೇ ಮಕ್ಕಳ ನಡವಳಿಕೆಯನ್ನು ತಿದ್ದದಿದ್ದರೆ, ಅವರೆಡೆಗೆ ಗಮನ ಕೊಡದಿದ್ದರೆ ದೊಡ್ಡವರಾದ ಮೇಲೆ ಅವರನ್ನು ಹಿಡಿಯಲು ಸಾಧ್ಯವೇ? ತಾಯಿಯ ಗರ್ಭದಲ್ಲಿರುವಾಗಲೇ ಮಗು ಎಲ್ಲವನ್ನು ಗ್ರಹಿಸಲು ತೊಡಗುತ್ತದೆ. ಬಾಲ್ಯದಲ್ಲಿ ಹೆತ್ತವರ, ಮನೆ ಮಂದಿಯ, ಸುತ್ತಲಿನವರ ಸಣ್ಣ ಪುಟ್ಟ ನಡವಳಿಕೆಗಳೂ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಹಾಗಾದರೆ ಹೆತ್ತವರು ಎಡವುದೆಲ್ಲಿ? ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದಕ್ಕೆ ಮುಂದೆ ಓದಿ.

*ಮಕ್ಕಳೊಂದಿಗಿರುವಾಗ ಮೊಬೈಲ್ ಬಳಸುವುದನ್ನು, ಫೋನ್‌ನಲ್ಲೇ ಮುಳುಗುವುದನು ಸಾಧ್ಯವಾದಷ್ಟು ಕಡಿಮೆ ಮಾಡಿ.
*ಮಗು ಏನನ್ನಾದರೂ ಹೇಳುತ್ತಿದ್ದರೆ ತಾಳ್ಮೆಯಿಂದ ಕೇಳಸಿಕೊಳ್ಳಿ. ನೀನಿನ್ನೂ ಸಣ್ಣವನು, ನಿನಗೇನೂ ಗೊತ್ತಾಗಲ್ಲ ಎಂದು ಗದರಿ ಸುಮ್ಮನಾಗಿಸಬೇಡಿ.
*ಮಕ್ಕಳ ಭಾವನೆಗಳಿಗೂ,ಅಭಿಪ್ರಾಯಗಳಿಗೂ ಬೆಲೆ ಕೊಡಿ. ಆಗ ಮಕ್ಕಳಲ್ಲಿ ಕೀಳರಿಮೆ ಮೂಡುವುದಿಲ್ಲ.
*ಮಕ್ಕಳನ್ನು ಗೌರವದಿಂದ ನಡೆಸಿಕೊಳ್ಳಿ.
*ಕೆಟ್ಟ ಘಟನೆಗಳು ಮಕ್ಕಳ ಮನಸ್ಸಿನ ಮೇಲೆ ಗಾಢ ಪ್ರಭಾವ ಬೀರಬಹುದು. ಹಾಗಾಗಿ ಒಳ್ಳೆಯ ಸಂಗತಿಗಳನ್ನು ಮಾತ್ರ ಅವರೊಂದಿಗೆ ಹಂಚಿಕೊಳ್ಳಿ.
* ಮಗುವಿನ ಸಣ್ಣಪುಟ್ಟ ಒಳ್ಳೆಯ ಕೆಲಸಗಳನ್ನೂ ಉತ್ತೇಜಿಸಿ.
*ಮಕ್ಕಳು ಜತೆಗಿರುವಾಗ ಇನ್ನೊಬ್ಬರ ಬಗ್ಗೆ ಲಘುವಾಗಿ ಮಾತನಾಡಿಕೊಳ್ಳಬೇಡಿ.
*ಮಗು ಮಾತನಾಡುತ್ತಿರುವಾಗ ಮಧ್ಯೆದಲ್ಲಿ ತಡೆದು ಗದರಿಸಬೇಡಿ. ಏನು ಹೇಳುತ್ತಿದೆ ಎಂದು ಪೂರ್ತಿಯಾಗಿ ಕೇಳಿಸಿಕೊಳ್ಳುವ ತಾಳ್ಮೆಯಿರಲಿ.
*ಇನ್ನೊಂದು ಮಗುವಿನೊಂದಿಗೆ ಹೋಲಿಸಿ ನಿಮ್ಮ ಮಕ್ಕಳನ್ನು ಅವಮಾನಿಸಬೇಡಿ.
*ಮಕ್ಕಳು ಮಾಡಿದ ತಪ್ಪುಗಳನ್ನೇ ಎತ್ತಿ ಹಿಡಿದು ಹೀಯಾಳಿಸುವುದನ್ನು ಬಿಟ್ಟು, ತಿದ್ದಿ ಬುದ್ಧಿ ಹೇಳಿ.
*ನೀವು ಯಾರ ಬಗ್ಗೆ, ಯಾವ ಪದ ಬಳಸುತ್ತೀರೆಂದು ಎಚ್ಚರ ವಹಿಸಿ. ನಿಮ್ಮ ಮಕ್ಕಳು ನಿಮ್ಮನ್ನು ಅನುಸರಿಸುತ್ತವೆ.
*ಮಕ್ಕಳು ತಪ್ಪು ಮಾಡಿದಾಗ ಯಾವುದೇ ಮುಲಾಜಿಲ್ಲದೆ ಅದನ್ನು ಸರಿಪಡಿಸಿ. ಆದರೆ ತಿದ್ದುವ ಭರದಲ್ಲಿ ಮಗುವನ್ನು ಕಠಿಣವಾಗಿ ಶಿಕ್ಷಿಸಬೇಡಿ.

ಇಂದಿನ ಯುವಜನತೆಯಲ್ಲಿ ಮರೆಯಾಗುತ್ತಿರುವ ಮಾನವೀಯ ಮೌಲ್ಯಗಳಿಗೆ ಅವರನ್ನು ಬೆಳೆಸಿರುವ ರೀತಿಯೂ ಕಾರಣವಲ್ಲವೆ? ನಿಮ್ಮ ಮಕ್ಕಳು ಸಮಾಜಕ್ಕೆ ಕೊಡುಗೆಯಾಗಬೇಕೇ ಹೊರತು, ಹೊರೆಯಾಗಬಾರದು. ಹಸಿ ಮಣ್ಣಿನ ಮುದ್ದೆಯಂತಿರುವ ಮಕ್ಕಳನ್ನು ಸುಂದರ ಮೂರ್ತಿಯಾಗಿಸುವ ಜವಾಬ್ದಾರಿ ತಂದೆ-ತಾಯಿಯರದ್ದೇ ಆಗಿರುತ್ತದೆ. ನಿಮ್ಮ ಬದುಕೇ ನಿಮ್ಮ ಮಕ್ಕಳಿಗೆ ಆದರ್ಶ. ನೀವು ಹೇಗೆ ಜೀವನ ನಡೆಸುತ್ತೀರೋ ಅದೇ ಪರಂಪರೆ ಮುಂದುವರಿಯುತ್ತದೆ. ಹಾಗಾಗಿ ಉತ್ತಮ ಬದುಕು ನಿಮ್ಮದಾಗಿರಲಿ.                                              ಸಂಗ್ರಹ: ವೀರೇಶ್ ಅರಸಿಕೆರೆ.ದಾವಣಗೆರೆ.                                                                                                     *ದಿನಕ್ಕೊಂದು ಆ್ಯಪ್*            https://play.google.com/store/apps/details?id=com.dinakkondukathe

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059