ದಿನಕ್ಕೊಂದು ಕಥೆ 959

*🌻ದಿನಕ್ಕೊಂದು ಕಥೆ🌻*
*ಜತೆ ಬೆಳಕಿನಲ್ಲಿ ಬದುಕನ್ನು ಘನವಾಗಿಸುವುದು*
 

ಹಲವಾರು ಸಂದರ್ಭಗಳಲ್ಲಿ ನಮ್ಮ ವರ್ತನೆಗಳು ಅವಾಸ್ತವಿಕ ಹಾದಿಯಲ್ಲಿರುತ್ತವೆ. ಅನಗತ್ಯವಾದ ಸಂಗತಿಗಳತ್ತಲೇ ಮನಸನ್ನು ಕೇಂದ್ರೀಕರಿಸುತ್ತೇವೆ. ಸಲ್ಲದ ವಿಚಾರಗಳತ್ತಲೇ ಗಿರಕಿ ಹೊಡೆಯುತ್ತ ವಾಸ್ತವವಾದುದನ್ನು ಮರೆಯುತ್ತೇವೆ. ಯಾವುದೋ ಜಡವಾದ ಮನೋಭಾವನೆ ಗಳಿಂದ ಹೊರಬರದೆ ಅಲ್ಲಿಯೇ ಸ್ಥಗಿತಗೊಳ್ಳುತ್ತೇವೆ. ಇವುಗಳು ಯುಕ್ತವಲ್ಲದ ನಡುವಳಿಕೆಗಳನ್ನು ಹುಟ್ಟುಹಾಕುತ್ತವೆ. ಮುಂದೊಮ್ಮೆ ಅವುಗಳೇ ನಮ್ಮ ಮನಃಸ್ಥಿತಿಯಾಗಿ ರೂಪಗೊಂಡು ಪ್ರತಿಕ್ರಿಯೆಗಳನ್ನು ನಿರ್ಧರಿಸಿ ಬಿಡುತ್ತವೆ.

ಸಂತ ಕಬೀರದಾಸರು ಬದುಕಿನ ಅಂತಿಮ ಕ್ಷಣಗಳನ್ನು ಎಣಿಸುತ್ತಿರುವ ಸಂದರ್ಭ. ಒಂದೆಡೆ ಅವರನ್ನು ಕಳೆದುಕೊಳ್ಳುವ ನೋವು, ಸಂಕಟ ಶಿಷ್ಯರನ್ನೆಲ್ಲ ಕಾಡುತ್ತಿದ್ದರೂ, ಮತ್ತೊಂದೆಡೆ ಅವರ ಅಂತಿಮ ಉಪದೇಶ ಕೇಳಲು ಕಾತುರತೆ. ಶಿಷ್ಯರನ್ನು ಉದ್ದೇಶಿಸಿ ಕಬೀರರು ಕ್ಷೀಣದನಿಯಲ್ಲಿ, ‘ನಾನು ದಿನವೂ ಕುಳಿತುಕೊಂಡು ಉಪದೇಶಿಸುತ್ತಿದ್ದ ಖರ್ಜೂರದ ಮರವನ್ನು ಮೊದಲು ಕಡಿದು ಹಾಕಿ, ನಾನು ಆ ಮರ ತುಂಡಾಗುವುದನ್ನು ನೋಡಬೇಕು’ ಎಂದರು.

ಕಬೀರರ ಈ ಮಾತು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿತು. ಬಹಳಷ್ಟು ವರ್ಷಗಳ ಕಾಲ ಖರ್ಜೂರದ ಮರದ ಕೆಳಗೆ ಕುಳಿತು ಕಬೀರರು ಉಪದೇಶ ಮಾಡಿದ್ದರಿಂದ, ಆ ಮರ ಭಕ್ತರಿಗೆಲ್ಲ ಪವಿತ್ರವಾಗಿತ್ತು. ಯಾರೊಬ್ಬರೂ ಅಲ್ಲಿನ ಮರವನ್ನು ಕಡಿಯಲು ಮನಸ್ಸು ಮಾಡಲಿಲ್ಲ. ಮುಂದಾಗಲಿಲ್ಲ. ಕಬೀರರು ಮತ್ತೆ ಮರವನ್ನು ಕಡಿದು ತುಂಡುತುಂಡು ಮಾಡಲು ಒತ್ತಾಯಿಸಿದರು. ಅಲ್ಲಿದ್ದ ಶಿಷ್ಯನೊಬ್ಬ, ‘ಗುರುಗಳೇ ಮರವನ್ನು ನಂತರ ಕಡಿದು ತುಂಡಾಗಿಸಬಹುದು.


ಅದಕ್ಕಿಂತ ಮುಖ್ಯ ನಿಮ್ಮ ಕೊನೆಯ ಕ್ಷಣಗಳ ದರ್ಶನ ಮತ್ತು ಉಪದೇಶ’ ಎಂದು ವಿನಂತಿಸಿದ. ಕಬೀರರು, ‘ನನ್ನ ಮರಣಾನಂತರ ಖಂಡಿತವಾಗಿ ನೀವು ಮರವನ್ನು ಕಡಿಯಲಾರಿರಿ. ನಾನು ಕುಳಿತು ಉಪದೇಶ ಮಾಡುತ್ತಿದ್ದ ಈ ಮರವೇ ಬಹುಶ್ರೇಷ್ಠ ಎಂದು ನೀವೆಲ್ಲ ಭಾವಿಸುತ್ತೀರಿ. ಅದಕ್ಕೆ ಇನ್ನಿಲ್ಲದ ಮಹತ್ವ ನೀಡುತ್ತೀರಿ. ನನ್ನ ಉಪದೇಶಗಳನ್ನು ಮರೆತು ಮರವನ್ನು ಪೂಜಿಸಲು ಪ್ರಾರಂಭಿಸುತ್ತೀರಿ ಎಂದು ನನ್ನ ಮನಸ್ಸು ಹೇಳುತ್ತಿದೆ. ಜಡವಾದ ವಸ್ತುವನ್ನು ಪೂಜ್ಯತೆಯಿಂದ ಕಾಣುತ್ತ ನನ್ನ ನೈಜ ಉಪದೇಶಗಳನ್ನು ಉಪೇಕ್ಷಿಸುವುದು ನನಗೆ ಇಷ್ಟವಾಗದ ಸಂಗತಿ. ದಯವಿಟ್ಟು ಅಲ್ಲಿನ ಮರವನ್ನು ನಾನು ಬದುಕಿರುವಾಗಲೇ ತುಂಡರಿಸಿ’ ಎಂದರು.

ಬದುಕಿನ ಹಲವಾರು ಸಂದರ್ಭಗಳಲ್ಲಿ ನಾವೇನು ಮಾಡುತ್ತಿದ್ದೇವೆ? ಏಕೆ ಮಾಡುತ್ತಿದ್ದೇವೆ? ಅಂತ ಅರಿತುಕೊಳ್ಳದೆ ನಡೆದುಕೊಳ್ಳುತ್ತೇವೆ. ವಿವೇಚನೆಯಿಲ್ಲದ, ಜಡಗೊಂಡ ಅಭ್ಯಾಸಗಳು ನಮ್ಮ ವಿಚಾರಗಳನ್ನು ನಿಶ್ಯಕ್ತವಾಗಿಸುತ್ತವೆ. ಅಗತ್ಯವಿರುವ ವಿಚಾರಗಳನ್ನೆಲ್ಲ ಮರೆತು ಬಿಡುತ್ತೇವೆ. ಅವುಗಳ ವಿಷಯದಲ್ಲಿ ತೀರಾ ಅನಾದರವಾಗಿ ನಡೆದುಕೊಳ್ಳುತ್ತೇವೆ. ಬದುಕಿನ ಎಲ್ಲ ಸಂದರ್ಭಗಳಲ್ಲಿಯೂ ಅನಗತ್ಯ ಅನ್ಯಪ್ರಭಾವ, ಪ್ರೇರಣೆಗಳನ್ನು ಮೀರಿ ನಾವು ಅನುಭಾವಿಕ ಎಚ್ಚರದೊಂದಿಗೆ ನಡೆಯಬೇಕು. ನೈಜತೆಯ ಬೆಳಕಿನಲ್ಲಿ ಅನುಸೃಷ್ಟಿ ಮತ್ತು ಪ್ರತಿಸೃಷ್ಟಿಗಳ ಮೂಲಕ ವರ್ತಮಾನವನ್ನು ಸಮರ್ಪಕವಾಗಿ ಅರ್ಥೈಸಿಕೊಳ್ಳಬೇಕು. ಸುತ್ತ ಗೋಡೆ ಕಟ್ಟಿಕೊಂಡು, ಮನೆಯ ಕಿಟಕಿ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿಕೊಂಡು ಕೂಡುವ ಪ್ರವೃತ್ತಿಯಿಂದ ಹೊರಬರಬೇಕು. ನೈಜತೆಯನ್ನು ಅರಿತು ಯುಕ್ತ ಹೆಜ್ಜೆಗಳನ್ನು ಇಡುವುದರಿಂದ ಮಾತ್ರವೇ ಬದುಕನ್ನು ಘನವಾಗಿಸಲು ಸಾಧ್ಯ.

ಕೃಪೆ: ಮಹಾದೇವ ಬಸರಕೋಡ.
ಸಂಗ್ರಹ:ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059