ದಿನಕ್ಕೊಂದು ಕಥೆ 1088

*🌻ದಿನಕ್ಕೊಂದು ಕಥೆ🌻*

ನಾನು ಕೋಪದಿಂದ ಮನೆ ಬಿಟ್ಟು ಬಂದೆ. ಎಷ್ಟು ಕೋಪ ಬಂದಿತ್ತೆಂದರೆ ಅಪ್ಪನ ಶೂ ಹಾಕ್ಕೊಂಡು ಬಂದಿರುವುದು ಕೂಡ ಗೊತ್ತಾಗಲಿಲ್ಲ. ಮಗನಿಗೆ ಒಂದು ಬೈಕ್ ಕೊಡಿಸಲಾಗದವರು ಇಂಜಿನಿಯರ್ ಆಗಬೇಕು ಎಂದು ಕನಸು ಕಾಣುವುದು ಯಾಕೆ....?

ನಾನು ದೊಡ್ಡ ವ್ಯಕ್ತಿಯಾಗುವವರೆಗೂ ಮತ್ತೆ ಮನೆ ಹೋಗುವುದಿಲ್ಲ....
 ನನಗೆ ಎಷ್ಟು ಕೋಪ ಬಂದಿದೆಯೆಂದರೆ ಎಂದೂ ಮುಟ್ಟದ ಅಪ್ಪನ ಪರ್ಸ್'ನ್ನು ತಗೊಂಡುಬಂದೆ. ಅಮ್ಮನಿಗೆ ಕೂಡ ಗೊತ್ತಿಲ್ಲದ ಲೆಕ್ಕಗಳೆಲ್ಲ ಅದರಲ್ಲಿ ಇವೆ. ಇಂದು ಅವೆಲ್ಲವೂ ನನಗೆ ಗೊತ್ತಾಯಿತು.

 ನಡೆಯುತ್ತಿದ್ದರೆ ಬೂಟ್'ಗಳಲ್ಲಿ ಏನೋ ಚುಚ್ಚಿದ ಹಾಗೆ ಆಗುತ್ತಿದೆ. ಅದರೂ ನನ್ನ ಕೋಪ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಬೂಟ್'ಗಳ ಒಳಗೆ ಒದ್ದೆಯಾಗ ಅನುಭವವಾಯಿತು. ಎತ್ತಿ ನೋಡಿದೆ ಬೂಟ್'ಗಳ ತಳದಲ್ಲಿ ರಂಧ್ರಗಳಾಗಿವೆ. ಹಾಗೆ ಕುಂಟುತ್ತ ಬಸ್ ನಿಲ್ದಾಣಕ್ಕೆ ಬಂದೆ. 

ಒಂದು ಗಂಟೆ ತನಕ ಯಾವುದೇ ಬಸ್ಸು ಇಲ್ಲ ಎಂದು ತಿಳಿಯಿತು. ಸರಿ ಏನು ಮಾಡುವುದು. ಅಪ್ಪನ ಪರ್ಸ್'ನಲ್ಲಿ ಏನೇನು ಇದೆ ನೋಡೋಣ ಎಂದು ತೆಗೆದೆ. ಆಫೀಸಿನಲ್ಲಿ 40,000 ಸಾಲ ತೆಗೆದುಕೊಂಡ ರಶೀದಿ, Laptop ಬಿಲ್ಲು. ಆ Laptop ನನ್ನ ಟೇಬಲ್ ಮೇಲಿದೆ. ಅಂದರೆ ನನಗಾಗಿ ಕೊಡಿಸಿದ್ದು.

ಮತ್ತೆ ಅದರಲ್ಲಿ ಆಫೀಸ್'ಗೆ ಒಳ್ಳೆಯ ಬೂಟ್'ಗಳನ್ನು ಹಾಕಿಕೊಂಡು ಬರುವಂತೆ ಮೇನೇಜರ್ ಕೊಟ್ಟ ನೋಟೀಸ್ ಲೇಟರ್. ಹೌದು ಅಮ್ಮ ನಾಲ್ಕು ತಿಂಗಳಿಂದ ಹೇಳುತ್ತಿದ್ದರು ಹೊಸ ಶೂ ತೆಗೆದುಕೊಳ್ಳಿ ಎಂದು. ಅಪ್ಪ ಇನ್ನೂ ಆರು ತಿಂಗಳು ಬರುತ್ತವೆ ಎನ್ನುತ್ತಿದ್ದರು.

'ನಮ್ಮ ಈ Exchange ಮೇಳದಲ್ಲಿ ಹಳೆಯ ಸ್ಕೂಟರ್ ಕೊಟ್ಟು ಹೊಸ ಬೈಕ್ ಪಡೆಯಿರಿ' ಎಂಬ ಭಿತ್ತಿಪತ್ರ ಕಾಣಿಸಿತ್ತು. 

ಹೌದು! ನಾನು ಮನೆ ಬಿಟ್ಟು ಬರುವಾಗ ಅಪ್ಪನ ಸ್ಕೂಟಾರ್ ಕಾಣಿಸುತ್ತಿಲ್ಲವಲ್ಲ....?

ನನ್ನ ಕಣ್ಣುಗಳು ಒದ್ದೆಯಾದವು. ತಕ್ಷಣವೇ ಮನೆ ಕಡೆ ಓಡತೊಡಗಿದೆ.....

ಈಗ ಬೂಟ್'ಗಳಿಂದ ನೋವಾಗುತ್ತಿಲ್ಲ....

ಮನೆಯಲ್ಲಿ ಅಪ್ಪ ಇಲ್ಲ... ಸ್ಕೂಟರ್ ಇಲ್ಲ... ನನಗೆ ಅರ್ಥವಾಯಿತು. ತಕ್ಷಣ Exchange ಆಪರ್ ನೀಡುವ ಸ್ಥಳಕ್ಕೆ ಓಡಿಬಂದೆ. ಅಪ್ಪ ಅಲ್ಲಿದ್ದಾರೆ....!

ದುಃಖವನ್ನು ತಡೆದುಕೊಳ್ಳಲಾಗಲಿಲ್ಲ. ಅಪ್ಪನನ್ನು ಗಟ್ಟಿಯಾಗಿ ತಬ್ಬಿಕೊಂಡು ಜೋರಾಗಿ ಅಳಲು ಆರಂಭಿಸಿದೆ....!

 " ಬೇಡ ಅಪ್ಪ...! ನನಗೆ ಬೈಕ್ ಬೇಡ....!!ಅಂದೆ

ಆವಾಗ್ಲೆ ಗೊತ್ತಾಗಿದ್ದು ಹೆತ್ತವರ ನೋವು,ಕಷ್ಟ,ಪ್ರೀತಿ ಎಂತದ್ದು ಅಂತ.

ನಾವು ಪ್ರೀತಿಸಬೇಕಾಗಿದ್ದು ಇಷ್ಟ ಪಡಬೇಕಾಗಿದ್ದು ಶೋಕಿ ತರುವಂತ ವಸ್ತುಗಳನ್ನಲ್ಲ
ನಮ್ಮ ಜೀವನವನ್ನ ಶೋಭಿಸುವ ಹೆತ್ತವರನ್ನ.

ಇದ್ದಾಗ ಕಡೆಗಣಿಸಿ ಸತ್ತಾಗ ಅತ್ತರೆ ಮತ್ತೆ ಹುಟ್ಟಿ ಬರುವವರೇ ಹೆತ್ತವರು.
ಯೋಚನೆ ಮಾಡಿ,
ಇಂತಹ ಕಥೆಗಳನ್ನು ಮಕ್ಕಳಿಗೆ ಹೇಳಿ ವ್ಯಕ್ತಿತ್ವ ಬೆಳೆಸಿ.

ಕೃಪೆ:ಮುಖ ಪುಸ್ತಕ.
*********************************************
           *ಮಾನವೀಯತೆ*

ಆತ ಆ ವಯಸ್ಸದ ಮಹಿಳೆಯಿಂದ ಯಾವಾಗಲೂ ಆರೆಂಜ್ ಗಳನ್ನು ಖರೀದಿಸುತ್ತಿದ್ದ. ದುಡ್ಡು ಕೊಟ್ಟು ತೂಕಮಾಡಿದ ಆರೆಂಜ್ ಗಳನ್ನು ಚೀಲದೊಳಗೆ ಹಾಕಿದ ನಂತರ ಅದರಿಂದ ಒಂದನ್ನು ತೆಗೆದು ಸುಲಿದು ಒಂದು ಎಸಳನ್ನು ತಿಂದು ಇದು ಹುಳಿಯಾಗಿದೆ ಅಂತ ಆ ಆರೆಂಜನ್ನು ಆ ಮಹಿಳೆಗೆ ಕೊಡುತ್ತಿದ್ದ. ಆಕೆ ಅದನ್ನು ತಿಂದು ಇದು ಸಿಹಿಯಾಗಿದೆ ಅಲ್ಲಾ ಅನ್ನುವಷ್ಟರಲ್ಲಿ ಆತ ಹೊರಟು ಹೋಗಿರುತ್ತಿದ್ದ.ಇದು ಪ್ರತಿದಿನ ಆವರ್ತಿಸುತ್ತಿದ್ದ. 
      ಆತನ ಪತ್ನಿಯು ಕೇಳುತ್ತಾಳೆ - ಆರೆಂಜುಗಳು ಸಿಹಿಯಾಗಿದ್ದರೂ, ನೀವು ಯಾಕೆ ಈತರ ದೂರು ಹೇಳಿ ನಾಟಕ ಮಾಡುತ್ತಿದ್ದೀರಾ?
      ಆತ ನಗುತ್ತಾ ಹೇಳುತ್ತಾನೆ - ಆ ಮಹಿಳೆ ಸಿಹಿಯಾದ ಆರೆಂಜ್ ಗಳನ್ನು ಮಾರುತ್ತಿದ್ದರೂ ಒಂದನ್ನು ಕೂಡಾ ತಿನ್ನುವುದಿಲ್ಲ. ನಾನು ಹೀಗೆ ಮಾಡುವುದರಿಂದ ಆಕೆಗೆ ದುಡ್ಡು ಕೊಡದೆ ಮತ್ತು ನಷ್ಟವಾಗದೆ ಒಂದು ಆರೆಂಜನ್ನು ತಿನ್ನಬಹುದಲ್ಲಾ?.
      ಎಲ್ಲಾ ದಿನವೂ ಆ ಅಂಗಡಿಯ ದೃಶ್ಯವನ್ನು ನೋಡುತ್ತಿದ್ದ ಪಕ್ಕದ ಅಂಗಡಿಯಾಕೆ ಆ ವಯಸ್ಸದ ಮಹಿಳೆಯತ್ರ ಕೇಳುತ್ತಾಳೆ - ಆತ ಪ್ರತಿದಿನ ನಿಮ್ಮ ಆರೆಂಜ್ ಹುಳಿಯಾಗಿದೆ ಅಂತ ದೂರುತ್ತಿದ್ದರೂ ತೂಕದಲ್ಲಿ ಯಾಕೆ ಹೆಚ್ಚು ಕೊಡುತ್ತಿದ್ದೀರಾ?
      ಅದಕ್ಕೆ ಆ ವಯಸ್ಸದ ಮಹಿಳೆ ನಗುತ್ತಾ ಹೇಳುತ್ತಾಳೆ - ನನಗೆ ಗೊತ್ತು ಆತ ಆರೆಂಜ್ ನ್ನು ದೂರುತ್ತಾ ಒಂದು ಆರೆಂಜ್ ನ್ನು ಕೊಡುತ್ತಿರುವುದು ನನಗೆ ತಿನ್ನೋಕೆ ಅಂತ . ಆದರೆ ಆ ವಿಷಯ ನನಗೆ ಗೊತ್ತಿದೆ ಅಂತ ಆತನಿಗೆ ಗೊತ್ತಿಲ್ಲ ....! ಅದರಿಂದಲೇ ತೂಕದಲ್ಲಿ ನಾನು ಒಂದು ಆರೆಂಜನ್ನು ಹೆಚ್ಚಾಗಿ ಕೊಡುತ್ತಿರುವುದು ...!

ಜೀವನದ ಮಾಧುರ್ಯವು ನಾವು ನಮ್ಮ ಸಹಜೀವಿಗಳಲ್ಲಿ ತೋರಿಸುವ ಸ್ನೇಹ ಸೌಹಾರ್ದ, ಗೌರವೀಯತೆ, ದಯನೀಯತೆ, ಮಾನವೀಯತೆ ಎಲ್ಲವೂ ಆಗಿದೆ.   
                            
ಕೃಪೆ : ಅಂತರ್ಜಾಲ ಸಂಗ್ರಹ :ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059